Monday 15 August 2011

                    ಸ್ವಾತಂತ್ರ್ಯದ ಬೆಳಕು

          ಸ್ವಾತಂತ್ರ್ಯದ ಬೆಳಕು ಮತ್ತೆ ಪ್ರಜ್ವಲಿಸಿಹುದು 
          ತಮದಿಂದ ನಾಡನುತ್ತರಿಸಲೆಂದೇ..
          ಮಂಜಿನಲಿ ಮರೆಯಾದ ನಾಡಚರಿತೆಯ ಮತ್ತೆ
          ಎಲ್ಲರೆದೆಯಲೂ ಸ್ಫುಟಿಸಿ ಬಿತ್ತರಿಸಲೆಂದೇ...||

          ಬರಿಯ ಪ್ರಭೆಯನು ಕೊಡುವ ಬೆಳಕಲ್ಲ ಇದು ನಿತ್ಯ,
          ರಾಷ್ಟ್ರಚೈತನ್ಯವನು ಬೆಳಗಿಸುವ ಜ್ಯೋತಿ..
          ನಾಡರಕ್ಷಣೆಗೆಂದು ಪ್ರಾಣಕೊಟ್ಟಿಹ ವೀರ,
          ಜನರ ರುಧಿರಾಜ್ಯದಿಂ ಝಗಮಗಿಪ ದೀಪ್ತಿ...||

          ಸುಖದ ನಶೆಯಲಿ ನಾಡುನುಡಿಗಳೆಲ್ಲವ ಮರೆತು,
          ಮೈಹೊದ್ದು ಮಲಗಿರುವ ಯುವಕರನ್ನೇ,
          ದೇಶಭಕ್ತಿಯ ದಿವ್ಯ ಕಿರಣವನೆ ಸೋಕಿಸುತ 
          ಬಡಿದೆಬ್ಬಿಸಲು ಪುಟಿಸಿ ನೆತ್ತರನ್ನೇ..

          ಹೇಡಿತನ,ಜಾಡ್ಯತೆಗಳಿಂದ ದುರ್ಬಲರಿಹರ
          ನರಗಳಲಿ ಹುರುಪೂಡಿ ಹೊಸೆದು ಧೈರ್ಯ 
          ಕಣಕಣವ ಹುರಿದುಂಬಿಸುತ, ಮನದಿ ಹೊತ್ತಿಸಲು,
          ಅನ್ಯಾಯವೆದುರಿಸುವ ಕ್ರಾಂತಿಕಿಡಿಯ...||

          ರತ್ನಸಿಂಹಾಸನದಿ ಕಂಗೊಳಿಪ ಭಾರತಿಯ 
          ಭವ್ಯರೂಪವ ಮತ್ತೆ ತೋರಲಿಂದೇ
          ಸತ್ಯ ಧರ್ಮದ ಶುಭ್ರ ಪ್ರಗತಿ ಮಾರ್ಗದಿ ಮುಂದೆ,
          ಕಣ್ತೆರೆಸಿ ಕೈಪಿಡಿದು ನಡೆಸಲೆಂದೇ...||

2 comments:

  1. ಕವಿತೆ ಪ್ರಸ್ತುತವಾಗಿದೆ... ಅಭಿನಂದನೆಗಳು...

    ReplyDelete
  2. ಅತ್ಯಂತ ಪ್ರಸ್ತುತ ಪದಗಳು👌👌

    ReplyDelete